Sunday, July 12, 2015

ಉಳಿದವರು ಕಂಡಂತೆ

"ಉಳಿದವರು ಕಂಡಂತೆ" ಒಂದು ವಿಭಿನ್ನ ಚಿತ್ರ. ಒಂದೇ ಕಥೆ. ಐದು ಜನರ ದೃಷ್ಟಿ ಕೋನ. ಕಡಲ ತಡಿಯ ಮಲ್ಪೆಯಲ್ಲಿ ನಡೆಯುವ ಕೊಲೆಯೊಂದನ್ನು ಈ ಐದು ಜನರು ತಾವು ನೋಡಿದ ರೀತಿಯಲ್ಲಿ, ತಮಗೆ ಅನುಭವಕ್ಕೆ ಬಂದ ಹಾಗೆ ಕಥೆಯನ್ನು ಹೇಳುತ್ತಾ ಹೋಗುತ್ತಾರೆ. ಅದೇ ಕಥೆ. ಅವೇ ಪಾತ್ರಗಳು. ಆದರೆ ನೋಡುವ ಪ್ರೇಕ್ಷಕರು ಉಳಿದ ಪಾತ್ರಗಳ  ಸಾಲಿಗೆ ಸೇರಿ ಒಂದೇ ಕಥೆ ಹೀಗೆ ವಿಬಿನ್ನತೆ ತಾಳುತ್ತದೆ ಎನ್ನುವದನ್ನು ಗಮನಿಸುತ್ತ ವೀಕ್ಷಿಸಬೇಕು, ಇಲ್ಲಿ ಪ್ರತಿಯೊಂದು ಪಾತ್ರವೂ ತಮಗೆ ತೋಚಿದ 'ಸತ್ಯ' ಬೆಳಕಿಗೆ ತರುತ್ತದೆ. ಆದರೆ ಕೊನೆಗೆ ಉಳಿಯುವುದು "ಉಳಿದವರು ಕಂಡಂತೆ".

ಕಡಲ ತಡಿಯ ಕಿನಾರೆ, ಚಿಕ್ಕ ಬಂದರು, ಹಲವಾರು ದೋಣಿಗಳು, ಮಳೆ, ಮೀನುಗಾರರ ಬದುಕು, ಹುಲಿ ವೇಷ ನೋಡುಗರ ಕಣ್ಮನ ಸೆಳೆಯುತ್ತವೆ. ಹಾಗೇ ಅಲ್ಲಿನ ಜನರ ಭೂಗತ ಜಗತ್ತಿನ ಸಂಪರ್ಕ ಆಶ್ಚರ್ಯ ತರುವಂತದ್ದು. ಈ ಚಿತ್ರದಲ್ಲಿ ಹಲವು ಮಕ್ಕಳ ಹುಡುಗಾಟದ ಜೊತೆಗೆ ಒಂದು ವಿಫಲ ಪ್ರೇಮ ಕಥೆಯೂ ಇದೆ. ಒಟ್ಟಿನಲ್ಲಿ ಈ ವಿಭಿನ್ನ ಚಿತ್ರ ನನ್ನನ್ನು ಆಕರ್ಶಿಸಿ, ಮನರಂಜನೆ ಜೊತೆಗೆ, ಎಲ್ಲರೂ ತಮ್ಮ ಭ್ರಮೆಯನ್ನೇ ಸತ್ಯ ಎಂದೊಕೊಳ್ಳುವ ನಿಜವನ್ನು ಮನದಾಳಕ್ಕೆ ಇಳಿಯುವಂತೆ ಮಾಡಿತು.  
 
ಈ ಚಿತ್ರದ ಕಥೆಯನ್ನು 'ನಾನು ಕಂಡಂತೆ' ಹೇಳದೇ 'ನಿಮಗೆ ತಿಳಿದಂತೆ' ನೋಡುವುದೇ ಒಳ್ಳೆಯದು. ಈ ಚಿತ್ರ ದುಡ್ಡು ಮಾಡಿತೋ, ಇಲ್ಲವೋ ಗೊತ್ತಿಲ್ಲ. ಆದರೆ ಈ ವಿಶಿಷ್ಟ ಪ್ರಯೋಗ   ಕನ್ನಡ ಚಿತ್ರರಂಗಕ್ಕೆ ಹೊಸತನ ತಂದಿರುವುದರಲ್ಲಿ ಯಾವುದೇ ಸಂದೇಹ ಇಲ್ಲ. ರಕ್ಷಿತ್ ಶೆಟ್ಟಿ, ಕಿಶೋರ್, ತಾರಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಟನೆಯ, ಅದರಲ್ಲೂ ಹಾವ-ಭಾವದ (ಬಾಡಿ ಲ್ಯಾಂಗ್ವೇಜ್) ಸಂಪೂರ್ಣ ಉಪಯೋಗ ಇದರಲ್ಲಿ ಮಾಡಿ ಕೊಳ್ಳಲಾಗಿದೆ.

ಎಲ್ಲರೂ ತಾವು ಕಂಡದ್ದನ್ನೇ ಸತ್ಯ ಎಂದುಕೊಳ್ಳುತ್ತಾರೆ. ಆದರೆ ಈ ಭ್ರಮೆ, ಎಷ್ಟು ಅವಾಂತರಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಈ ಚಿತ್ರದ ಕೊನೆಯ ಸನ್ನಿವೇಶ ತೋರಿಸಿ ಕೊಡುತ್ತದೆ. ಒಂದು ಕೊಲೆ ಇನ್ನೆರುಡು ಕೊಲೆಗಳಿಗೆ ಕಾರಣವಾಗುತ್ತದೆ. ಮೂರು ಜನರ ಜೀವ ಮತ್ತು ಅವರು ತಮ್ಮವರಲ್ಲಿ ಹುಟ್ಟಿಸಿದ್ದ ಕನಸುಗಳು ಕರಗಿ ಹೋಗುತ್ತವೆ. ಮನುಷ್ಯನ ಮನಸ್ಸು ಕೆಲಸ ಮಾಡುವ ರೀತಿ ಯಾವತ್ತು ಹೀಗೇನೋ? ಅವನಿಗೆ ತನ್ನ ದೃಷ್ಟಿ ಕೋನದ ಹೊರಗೆ ಒಂದು ವಾಸ್ತವ ಇದೆ ಎನ್ನುವದರ ಅರಿವೇ ಬರುವುದಿಲ್ಲ. ಅಥವಾ ಅದು ಬರುವ ಹೊತ್ತಿಗೆ ಅನಾಹುತ ಆಗಿ ಹೋಗಿರುತ್ತದೆ. ಮಿಂಚಿ ಹೋಗುವುದು ಕಾಲವಲ್ಲ. ಆ ಕಾಲದಲ್ಲಿ ದುರ್ಗತಿಗೀಡಾಗುವ ಜನರ ಬದುಕು.

ಈ ಹೊತ್ತಿಗೆ ನನಗೆ ಅರಿವಾಗಿದೆ. ಈ ಚಿತ್ರ ಕೂಡ ಐದು ಜನರ ದೃಷ್ಟಿ ಕೋನ ಮಾತ್ರ. ನಿಜ ಜೀವನ ನಾವು ನಿತ್ಯ ವ್ಯವಹರಿಸುವ ಎಲ್ಲ ಜನರ ದೃಷ್ಟಿ ಕೋನಗಳ ಸಂಗಮ.

ಮನರಂಜನೆಯ ಜೊತೆ ಹೊಸ ಪ್ರಯೋಗಗಳನ್ನು ಬೇರೆ ಭಾಷೆಗಳ ಚಿತ್ರಗಳು ಮಾಡಿವೆ. ಆದರೆ ಅಂತಹ ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಹೊಸದು ಹಾಗೂ ಅಬಿನಂದನೀಯ. 

No comments:

Post a Comment